“ತೆಂಕಾಳಮ್ಮನ ಗುಡಿ ಬಾಗಿಲುಗಳು ಯಾವಾಗಲೂ ತೆರೆದೇ ಇರುತ್ತೆ. ಯಾರೂ ಇದನ್ನು ಮುಚ್ಚುವುದಿಲ್ಲ. ಅದಕ್ಕೆ ಅಂತಾನೆ ಒಂದು ದೊಡ್ಡ ಕಥೆ ಇದೆ. ಬಹಳ ಚಿಕ್ಕದಾಗಿ ಹೇಳಬೇಕು ಅಂದರೆ, ಬಾಗಿಲು ಮುಚ್ಚೋಕೆ ಅಂತ ಇಟ್ಟ ಮರದ ಬಾಗಿಲುಗಳು ಅಲ್ಲೇ ಚಿಗುರೋಕೆ ಆರಂಭಿಸಿತು. ಜೀವಂತ ಮರವನ್ನ ಬಾಗಿಲು ಮಾಡೋಕೆ ಆಗುವುದಿಲ್ಲವಲ್ಲ. ಮೊದಲಿಗೆ ಏನೋ ನೀರು ಗಾಳಿ ತಾಕಿ ಹಾಗಾಗಿದೆ ಅಂತ ಸುಮ್ಮನಾಗಿ, ಚಿಗುರಿರುವ ಮರ ಬೇಡ ಅಂತ ಚೆನ್ನಾಗಿ ಒಣಗಿರುವ ಮರ ತಂದು, ಕಡಿದು ಬಾಗಿಲು ಮಾಡಿದರು. ಅದಕ್ಕೆ ಗೆದ್ದಲಾಗದೇ ಇರಲಿ, ಹಸಿ ತಾಕದೆ ಇರಲಿ ಅಂತ ಏನೇನೋ ತೋಚಿದ್ದೆಲ್ಲ ಮಾಡಿ ಇಟ್ಟಿದ್ದರು. ಒಂದು ರಾತ್ರಿ ಕಳದದ್ದೇ, ಮಾರನೇ ದಿನ ಬೆಳಗ್ಗೆಯೇ, ಆ ಮರದ ಬಾಗಿಲಲ್ಲೂ ಚಿಗುರು ಮೂಡಿತ್ತು. ಸರಿ ಅದನ್ನ ಕತ್ತರಿಸಿದರೆ ಆಯಿತು ಬಿಡು ಅಂತ ಕತ್ತರಿಸಿಬಿಟ್ಟಿದ್ದರು. ಮಾರನೇ ದಿನ ಬಂದು ನೋಡಿದರೆ, ಅಲ್ಲಿ ಬಾಗಿಲೇ ಇಲ್ಲ, ದೊಡ್ಡ ಮರ ಬೆಳೆದು ನಿಂತಿದೆ.
ಆಗಲೇ ಊರಲ್ಲಿದ್ದವರೆಲ್ಲರಿಗೂ ರಾತ್ರಿ ಕನಸಲ್ಲಿ ಆ ತೆಂಕಾಳಮ್ಮ ಬಂದಿದ್ದಳಂತೆ. ಬಂದೋಳೆ ಎಲ್ಲರಿಗೂ ಜೋರಾಗಿ ಕನಸಲ್ಲೇ ಕೇಳೋ ಹಾಗೆ “ಅಯ್ಯೋ ಹಾಳವುದವರೇ ನಂಗೇ ಬಾಗಿಲು ಹಾಕಿ ಕಟ್ಟಿ ಹಾಕ್ತಿರಾ. ನಾಳೆಗೆ ನಿಮ್ಮನ್ನೆಲಾ ಒಂದೇ ಬಾರಿಗೆ ಕುಡಿದು ಹಾಕುತ್ತೇನೆ. ಮೊದಲು ನಂಗೆ ಕಟ್ಟಿದ ಗುಡೀನ ಹೊಡೆದು ಹಾಕ್ರೋ. ಮೊದಲು ಬಾಗಿಲು ಕಿತ್ತಾಕ್ರೋ. ಸುತ್ತ ಬಯಲು ಮಾಡ್ರೋ. ಸುತ್ತಾ ಬೇವಿನಮರ ಬೇಕ್ರೋ" ಅಂತ ಮಲಗಿ ಸುಖವಾಗಿ ಕನಸು ಕಾಣ್ತಿದ್ದ ಎಲ್ಲರಿಗೂ ಅದೇ ಕನಸಲ್ಲಿ ಅಷ್ಟು ಜೋರಾಗಿ ಕೇಳೋ ರೀತಿಯಲ್ಲಿ ಹೇಳಿದಳು. ಎಲ್ಲರಿಗೂ ಒಮ್ಮೆಗೇ ಕನಸಲ್ಲಿ ಹೀಗೆ ಜೋರಾಗಿ ಯಾರಾದರೂ ಹೇಳವುದಕ್ಕೆ ಸಾದ್ಯವ? ಈ ಬಗೇನಾ ಎಲ್ಲಾದರೂ ಕೇಳಿದ್ಯ. ಎಲ್ಲರಿಗೂ ಹೇಳಿದ್ದಾದ ಮೇಲೆ, ಎಲ್ಲರ ಕನಸಲ್ಲೂ ಒಟ್ಟಿಗೆ ಬಂದಾದಮೇಲೆ, ಯಾರು ಯಾರನ್ನು ಒಪ್ಪಿಸೋಕಾಗತ್ತೆ ಹೇಳಿ. ಎಲ್ಲರೂ ಬೆಳ್ಳಂಬೆಳಗ್ಗೆ ಗುಡಿ ಹತ್ತಿರ ಬಂದವರೆ ನೋಡುತ್ತಾರೆ. ಎಲ್ಲರೂ ಅಲ್ಲಿ ಸೇರಿದ್ದಾರೆ. ಎಲ್ಲರಿಗೂ ಒಂದೇ ಕನಸು. ಎಲ್ಲರಿಗೂ ಅದೇ ಮಾತು. ಅದು ಏನು ಆವೇಶ ಬಂತೋ ಏನೋ, ಅಲ್ಲಿ ಸೇರಿದವರೆಲ್ಲ ಹಾಗೇ ಹೋಗಿ ಆ ಗುಡೀ ಗೋಡೆಗಳನ್ನೂ, ಆ ಗುಡಿಗೆ ಹಾಕಿದ ಬಾಗಿಲನ್ನೂ ಕಿತ್ತು ಬಿಸಾಕಿದ್ರು.
ಹಾಗೆ ಕಿತ್ತಿದ ಬಾಗಿಲುಗಳ ಕಟ್ಟಿಗೆ ಚೂರುಗಳು ಬಿದ್ದ ಕಡೆಗಳಲ್ಲೆಲ್ಲಾ ಅವು ಚಿಗುರಿದವು. ಹಾಗೆ ಚಿಗುರಿದ ಮರದ ಚೂರುಗಳು ಬೆಳೆದೂ ಬೆಳದೂ, ನೀನು ನೋಡಿದ್ದೀಯಲ್ಲ, ಕೆರೆ ದಾಟಿ ಕಣ್ಣು ಹಬ್ಬುವ ವರೆಗೂ ಬೆಳೆದ ಬೇವಿನ ಮರಗಳು. ದೊಡ್ಡ ಬೇವಿನ ತೋಪದು. ಅದಕ್ಕೇ, ಈ ಗುಡಿಗೆ ಸೂರಿಲ್ಲ, ಗೋಡೆೆಯಿಲ್ಲ, ಬಯಲಲ್ಲಿ ಕೂರೋ ದೇವತೆ ತೆಂಕಾಳಮ್ಮ. ಅಗೋ ಅದಕ್ಕೆ ನೆರಳು ಕೊಡೋಕೆ ಅಂತಾನೆ ಅದರ ಪಕ್ಕವೇ ಬೆಳೆದಿರುವುದೇ ಬೇವಿನ ಮರಗಳು. ಯಾರು ಬಂದರೂ, ಅದೆಷ್ಟೇ ಜನ ಬಂದರೂ ಇಲ್ಲಿ ನಿಲ್ಲಬಹುದು. ಕೂರಬಹುದು. ಅಮ್ಮನ್ನ ನೋಡಬಹುದು. ತೆಂಕಾಳಮ್ಮನಿಗೆ ಈ ಬಾರಿ ಜಾತ್ರೆ ಆಗಬೇಕು. ಐದು ವರ್ಷಕ್ಕೊಮ್ಮೆ ನಡೆಯೋ ಜಾತ್ರೆ, ಕಡೇ ಬಾರಿ ಅದೇನೋ ರೋಗ ಅಂತ ಜನೋ ಸೇರೋ ಹಾಗಿಲ್ಲ ಅಂತ ಮಾಡಲೇ ಇಲ್ಲ. ಹಾಗಾಗಿ ಅಮ್ಮನಿಗೆ ಭಾರೀ ಕೋಪಬಂದಿದೆ. ಕಾಯಿಲೇಗೆ ಸತ್ತ ಶವಗಳೇನೋ ಲೆಕ್ಕಕ್ಕೆ ಸಿಗಲೇ ಇಲ್ಲ. ಆಗಲೆ ಜಾತ್ರೆ ಒಂದು ಬಾರಿ ತಪ್ಪಿದೆ. ಈಗ ಹತ್ತು ವರ್ಷಗಳ ನಂತರ ಮತ್ತೇ ಜಾತ್ರೆ ಮಾಡೋ ಅವಕಾಶ ಸಿಕ್ಕಿದೆ. ಈ ಬಾರಿ ಅದಕ್ಕೆ ಜಾತ್ರೆ ಮಾಡೋದೇ ಅಂತ ತೀರ್ಮಾನವಾಗಿದೆ. ನಿಂಗೆ ಗೊತ್ತೋ ಇಲ್ಲವೋ, ನಿಮ್ಮ ಹೆಂಡಿರು, ಸುಮನ, ಈ ಜಾತ್ರೆಗೆ ಬರಲೇಬೇಕು. ಅದನ್ನ ಹೇಳೋಕೆ ಅಂತಾನೆ ಬಂದೆ ನೋಡು." ಅಂತ ಮುತ್ಯಾಲು ಹಾಕಿದ ಎಲೆೆಯ ಅಡಿಕೆಯ ಬಾಯಿಯಲ್ಲಿ ಕೆಂಪಾಗಿ ತೊಟ್ಟಿಕ್ಕುತ್ತಿದ್ದ ಕೆಂಪನೆ ಎಂಜಲನ್ನು ಮಾಸಿದ ಬಣ್ಣದ ಟವಲ್ಲಿನಿಂದ ಒರೆಸಿಕೊಳ್ಳುತ್ತಲೇ ಸುಶೀಲಂಗೆ ಎಲ್ಲಾ ಹೇಳ್ತ ಇದ್ದ. ಆಗ ತನ್ನ ಕೆಲಸಕ್ಕೆ ಸಮಯ ಆದದ್ದ ತಿಳಿದು, ಎಂದಿನಂತೆ, ಸುಶಿ ಸಹಜವಾಗಿ ತಕತಕ ಅನ್ನೋಕ್ಕೆೆ ಆರಂಭಿಸಿ, "ಅಯ್ಯೋ ಲೇಟಾಯ್ತು" ಅಂತ ಅರಚೋದೊಂದು ನಿಲ್ಲಲೇ ಇಲ್ಲ.
ಸುಮನ ಒಬ್ಬಳೆ ಈಗ ಬಲಿಗರ ಮನೆಯಲ್ಲಿ ಉಳಿದಿರವುದು. ತೆಂಕಾಳಮ್ಮನಿಗೆ ಜಾತ್ರೆ ನಡೆಯಬೇಕು ಅಂದರೂ, ರಥ ಹೊರಡಬೇಕು ಅಂದರೂ, ಬಲಿಗ ಮನೆಯವರಿಂದಲೇ ಬಲಿಗಯ್ ನಡೆಯಬೇಕು. ಅವರ ಮನೆಯವರು ಮಾತ್ರಾ ಆ ದೇವಿಗೆ ಬಲಿ ಕಡಿಯುವವರು. ಸರಿಯಾಗಿ ಹೇಳುವುದಾದರೆ ಕರಿ ಕೋಣದ ತಲೆೆಯ ಕಡಿದು ತೆಂಕಾಳಮ್ಮನ ಪಾದಕ್ಕೆ ಇಟ್ಟರೇನೆ ಅವಳು ಸಂತೃಪ್ತಳಾಗುವುದು, ಹಾಗೂ ರಥ ಹೊರಡವುದು, ಜಾತ್ರೆ ನಡೆಯುವುದು ,ಎಲ್ಲ. ಇಲ್ಲದಿದ್ದಲ್ಲಿ, ಜಾತ್ರೆ ಅಷ್ಟೇ ಅಲ್ಲ, ರಥ ಸಹ ಕದಲಲ್ಲ. ಇವರ ಕುಟುಂಬದವರೇ ಈ ಕೆಲಸ ಮಾಡಬೇಕು. ಅದಕ್ಕೂ ಒಂದು ಪುರಾಣ ಇದೆ. ಅದು ಈಗ ಬೇಡ. ಸುಮಾಳ ಅಪ್ಪ ಪ್ರತಿ ಬಾರಿ ಈ ಕೆಲಸ ಮಾಡುತ್ತಾ ಇದ್ದರು. ಅವರ ಅಪ್ಪ ತೀರಿಹೋದ ಮೇಲೆ, ಬಲಿ ಹಾಕೋದನ್ನ ನೋಡಿಕೊಳ್ಳೋಕೆ ಅಂತ ಸುಮಾಳ ಚಿಕ್ಕಪ್ಪ ಹಾಗೂ ಚಿಕ್ಕಪ್ಪನ ಮಗ ಇದ್ದರು. ಆದರೆ ಮೊನ್ನೆ ಆ ಕಾಯಿಲೆಗೆ ಊರಿಗೆ ಊರೇ ಸಾಯೋ ಹಾಗೆ ಆದಾಗ ಚಿಕ್ಕಪ್ಪನೂ ಸತ್ತ, ಅವನ ಮಗನೂ ಸತ್ತ. ಹಾಗಾಗಿ ಈ ಇಡೀ ಕುಟುಂಬದಲ್ಲಿ ಈಗ ಉಳಿದಿರುವವಳು ಸುಮನ ಮಾತ್ರ. ಸುಮನ ಬಲಿಗ ಆಗಬಹುದಾ? ಅಂತ ಬಹಳಷ್ಟು ಚರ್ಚೆ ಊರಿನಲ್ಲಿ ನಡೆದೇ ಇತ್ತು. ಬಲಿಗ ಅಂತ ಕರೆಯಬೇಕೋ, ಬಲಿಗಿ ಅಂತ ಕರಿಯಬೇಕೋ, ಎಂಬೋ ಚರ್ಚೆಗೆ ಊರಿನ ಎಲ್ಲಾ ವಯ್ಯಾಕರಣಿ ವಿದ್ವಾಂಸರಲ್ಲಿ ಘನಘೋರ ಚರ್ಚೆಯೆಲ್ಲಾ ನಡೆಯಿತಾದರೂ ಕಡೆಗೆ ಬಲಿಗ ಅಂತಲೇ ಒಪ್ಪಿದ್ದರು. ವ್ಯಾಕರಣವನ್ನೇನೋ ನಿರ್ಧರಿಸಿದರೂ, ಹೆಣ್ಣು ಈ ಕೆಲಸ ಮಾಡಬಲ್ಲಳೋ ಇಲ್ಲವೋ ಎಂಬುದನ್ನು ನಿರ್ಧರಿಸುವುದು ಅಷ್ಟು ಸುಲಭವಾಗೇನೂ ಸಾಧ್ಯವಾಗಲಿಲ್ಲ . ಅದೂ ಸುಮನಳ ಬಗೆಗೆ ಗೊತ್ತಿದ್ದ ಮಂದಿಗೆ ಅವಳ ದೇಹದಾಕಾರ ಹಾಗೂ ಮಾನಸಿಕ ಸ್ಥಿತಿಯ ಬಗೆಗೆ ತಿಳಿದಿದ್ದವರಿಗೆ ಅವಳಿಂದ ಸಾಧ್ಯವೇ ಇಲ್ಲ ಎಂಬುದು ಉತ್ತರವಾಗಿತ್ತು. ಆ ಸಣಕಲು ಕೈ ಕಾಲಿನ ಹುಡುಗಿ ದೇವರಿಗೆ ಬಿಟ್ಟ ಅಷ್ಟು ದೊಡ್ಡ ಎಮ್ಮೆಯ ತಲೆ ಕಡೀಲಿಕ್ಕೆ, ಅದೂ ಒಂದೇ ಏಟೆಗೆ ಕಡೀಲಿಕ್ಕೆ ಸಾಧ್ಯವೇ ಇಲ್ಲ ಎಂಬುದು ಸರಿ ಸುಮಾರು ಎಲ್ಲರ ಅಭಿಪ್ರಾಯವೂ ಆಗಿತ್ತು. ಆದರೂ, ಊರಿನವರಾರಿಗೂ ತೆಂಕಾಳಮ್ಮನ ಜೊತೆ ವಾದಿಸಲಿಕ್ಕೆ ಸಾದ್ಯವಿರಲಿಲ್ಲ, ಹಾಗೂ ಬೇಡವಾಗಿತ್ತು. ಈ ಕ್ಲಿಷ್ಟ ಪರಿಸ್ಥಿತಿಯನ್ನು ತಪ್ಪಿಸಿಕೊಳ್ಳಲಿಕ್ಕೆ ಪರಿಹಾರವಾಗಿ ಒಂದು ತೀರ್ಮಾನಕ್ಕೆ ಬಂದರು. ಇದನ್ನು ಪ್ರಯತ್ನಿಸಬಹುದು ಎಂದು ನಿರ್ಧರಿಸಿದ್ದರು. ಕೋಣವನ್ನು ಬಲಿಪೀಠಕ್ಕೆ ತಂದು ಕಟ್ಟಿಹಾಕಿ ಶಾಸ್ತ್ರಕ್ಕೆ ಅಂತ ಕತ್ತಿನ ಅವಳ ಕೈಯಲ್ಲಿ ಮುಟ್ಟಿಸಿ ಒಂದು ನಾಲ್ಕು ಹನಿ ರಕ್ತ ನೆಲ ತಾಗಿದರೆ ಸಾಕು, ನಂತರ ಯಾರಾದರೂ ಬಲಿಷ್ಠರು ಕೋಣದ ತಲೆ ಕಡೆಯುವುದು ಸರಿಯಾದುದು ಎಂಬುದಾಗಿತ್ತು. ಅದಕ್ಕೆ ಸುಮನಳನ್ನ ಒಪ್ಪಿಸಿ ಈ ವಿಷಯ ಹೇಳಿ ಹೋಗಲಿಕ್ಕೆ ಅಂತಾನೆ ಮುತ್ಯಾಲು ಬಂದಿದ್ದ.
———————————————————
———————————————————
ಒಬ್ಬೊಬ್ಬರಾಗಿ ಜನ ಹೊರಗೆ ಬರುತ್ತಲೇ ಇದ್ದಾರೆ. ಇವರ? ಅವರ? ಅಂತ ಗುರುತು ಎಲ್ಲಿ ತಪ್ಪಿ ಹೋಗುತ್ತೋ ಎಂದು ನೋಡುತ್ತಾ ಹೋದ ಹಾಗೆ ಬರೀ ಮುಖಗಳೇ ಕಾಣುತ್ತಿವೆ. ಬರೀ ಮುಖಗಳು. ಇನ್ನೂ ಇವರು ಬರಲೇ ಇಲ್ಲ. ಸುಮಾರು ಎಂಟು ಗಂಟೆಗಳಾಯಿತು. ಏನಾಯಿತೋ ಏನೋ ತಿಳೆಯದೆ ಎಲ್ಲೋ ದೂರದಲ್ಲಿ ವ್ಯಾಸಪೀಠದ ಮಂಟಪದ ಬಳಿ ಕೂತಿದ್ದ ಸುಮನ ದರ್ಶನ ಮುಗಿಸಿ ಬಂದರೆ ಎಲ್ಲಿಗೆ ಹೋಗುತ್ತಾರೋ ಏನೋ ಎಂದು ಗಾಬರಿಯಾಗಿ, ದರ್ಶನ ಮುಗಿಸಿ ಜನ ಹೊರಬರುವ ದ್ವಾರದ ಬಳಿ ಕೂತಳು. ತಿರುಮಲವೇ ಹಾಗೆ. ಇಲ್ಲಿ ಯಾರು ಎಲ್ಲಿಂದ ಬಂದರೂ ಆ ಕೂದಲು ಬೋಡಿಸಿದ ಗುಂಡಿನಲ್ಲಿ ಎಲ್ಲರೂ ಒಂದೇ ಬಗೆಯಲ್ಲೋ, ಪರಿಚಿತರಂತೆಯೋ ಕಂಡುಬಿಡುತ್ತಾರೆ. ನೋಡುತ್ತಲೇ ಇದ್ದಾಳೆ. ಜನರು ಬರೀ ಜನ ಬರುತ್ತಲೇ ಇದ್ದಾರೆ. ಯಾವುದೋ ನಲ್ಲಿಯಲ್ಲಿ ನಿಲ್ಲದೆ ನೀರು ಸುರಿಯುವ ಹಾಗೆ. ತೊಟ್ಟಿಕ್ಕುವ ಹಾಗಲ್ಲ, ಸುಮ್ಮನೆ ಹರಿಯುವ ಹಾಗೆ. ಮುಖವನ್ನು ನೋಡಿ ತಿಮ್ಮಪ್ಪನ ದರ್ಶನದ ಭವ್ಯತೆಯನ್ನು ಪತ್ತೆ ಹಚ್ಚಬಲ್ಲ ಒಳನೋಟಗಳ ಗೊಡವೆ ಏನೂ ಅವಳಿಗಿರಲಿಲ್ಲವಾಗಿ, ಬರೀ ಮುಖಗಳು ಕಣ್ಣು ಮೂಗು ಬಾಯಿ ಆಗಜಾನೆ ಬೋಳಿಸಿದ ನುಣ್ಣೆಗಿನ ಗುಂಡುಗಳು, ಅದಕ್ಕೆ ಹಚ್ಚಿದ ಗಂಧದ ಬಣ್ಣದ ಗಂಧವೆಂದು ಹೇಳುವ ಬಣ್ಣದ ವಸ್ತು. ಮೂರು ನಾಮ ಹಾಕುತ್ತೇವೆಂದು ಕೇಳುತ್ತಲೇ ಬರುವ ಪುಟ್ಟಮಕ್ಕಳು. ಬರೀ ತುಪ್ಪದಲ್ಲಡ್ಡು ತಿಂದು ಉದುರಿಸಿದ ನೆಲದ ಮೇಲೆ ಅದನ್ನು ತುಳಿದು ತುಳಿದು ನೆಲವೆಲ್ಲಾ ತುಪ್ಪವಾಗಿ ಎಲ್ಲಿ ಜಾರಿದರೆ ನೆಲವೇ ಒಡೆದುಹೋಗುತ್ತದೆಯೋ ಎಂದು ತನ್ನೆಲ್ಲಾ ಭಾರದ ಶರೀರವನ್ನು ಹಗುರವಾಗಿ ಎತ್ತೊಯ್ಯುತ್ತಿರುವವನನ್ನು ನೋಡುತ್ತಲೇ ಇರುವಾಗ ಆ ನೆಲವನ್ನು ತೊಳೆಯಲಿಕ್ಕೆ ನೀರು ಹಾಕಲಿಕ್ಕೆ ಬಂದವ, ಯಾರ ಮುಲಾಜಿಗೂ ನಾವಲ್ಲೆ ಎನ್ನುತ್ತ, "ಲೇವಂಡಿ, ಲೇವಂಡಿ" ಎಂದು ನೀರು ಸುರಿಯಲಾರಂಬಿಸಿದ. ಸುಮನ ಆ ಮುಖಗಳನ್ನು ನೋಡುತ್ತಲೇ ಇದ್ದಳು, ತಿರುಮಲದ ದೇವಸ್ಥಾನದಲ್ಲಿ ಗುರುತಿರುವವರನ್ನು ಗುರುತಿಸುವುದೆಂದರೆ ಸಮುದ್ರದ ಮೀನನ್ನು ಗುರುತಿಸಿ ಅದು ತಮ್ಮದೇ ಎಂಬಂತೆ. ಆದರೆ ಮಾಡುವುದೇನು ಎಂಬತ್ತರ ಹತ್ತಿರವಾಗಿರುವ ಇಬ್ಬರು ಅಜ್ಜಿಯರು, ಕಾಲು ನೋವಿನ ಅಮ್ಮ, ಈ ಮೂವರೂ ದರ್ಶನಕ್ಕೆ ಅಂತ ಹೋಗಿ ಆಗಲೇ ಎಂಟು ಗಂಟೆಗಳಾಗಿವೆ.
ಸುಶಿಲ್ ಕರೋನಾ ರೋಗ ಮುಗಿದ ಮೇಲೆ ತನ್ನ ಮನೆಯವರಿಂದ ಬಂದಿದ್ದ ಮನೆ ಜಮೀನಿನೊಟ್ಟಿಗೆ ತಿರುಪತಿ ಬಳಿಯ ಒಂದು ಹಳ್ಳಿಯಲ್ಲಿ ನೆಲಗೊಂಡುಗೊಳ್ಳವುದು ಅಂತ ತೀರ್ಮಾನವಾಗಿತ್ತು. ಹತ್ತಿರವೇ ಚೆನ್ನೈ ಹಾಗೂ ನಾಲ್ಕು ಗಂಟೆಗಳ ಪಯಣಕ್ಕೆ ಬೆಂಗಳೂರು ಇದ್ದುದರಿಂದ, ಅಲ್ಲದೆ ಹೈದರಾಬಾದಿಗೆ ಹಲವಾರು ವಿಮಾನಗಳು ತಿರುಪತಿಯಿಂದ ಆರಂಭವಾದದ್ದರಿಂದ ಹೈದರಾಬಾದಿನಲ್ಲಿ ಇರುವುದಕ್ಕಿಂತ ತಿರುಪತಿಯ ತಮ್ಮದೇ ಪೂರ್ವಿಕರ ಮನೆಯಲ್ಲಿರಬಹುದು ಎಂದೂ, ವಾರಕ್ಕೆ ಒಂದೆರಡು ಬಾರಿ ಹೈದರಾಬಾದಿಗೆ ಕೆಲಸದ ಅವಶ್ಯವಿದ್ದಾಗಲೆಲ್ಲಾ ಹೋಗಿಬರಬಹುದು ಎಂದು ತೀರ್ಮಾನಿಸಿದ್ದ. ಉಳಿದಂತೆ ಮನೆಯಲ್ಲೇ ಕೆಲಸ ನಿರ್ವಹಿಸಲು ಅವಶ್ಯವಾದ ಎಲ್ಲಾ ಸಲಕರಣೆಗಳೊಂದಿಗೆ ಅವರ ಹಳೆಯ ಮನೆಯನ್ನು ನವೀಕರಿಸಿಕೊಂಡು ಸುಮನಳೊಟ್ಟಿಗೆ ವಾಸವಾಗಿದ್ದರು.
ಹೀಗೆ ತಿರುಪತಿಯಲ್ಲಿ ನೆಲೆಯಾಗಿದ್ದೆ ತಿಮ್ಮಪ್ಪನ ದರ್ಶನಕ್ಕೆ ಅಂತ ಬಂದ ಜನರು ಇವರ ಮನೆಗೆ ಬರುವುದೂ, ಹಲವರನ್ನು ಸುಮನಳೇ ದರ್ಶನಕ್ಕೆ ಕೊಂಡೊಯ್ಯುವುದೂ ಸಾಮಾನ್ಯವಾಗಿತ್ತು. ತಿರುಪತಿಗೆ ದರ್ಶನದ ಟಿಕೆಟ್ ಇಲ್ಲದೆ ಬಂದದ್ದೇ ಆದರೆ ಇಲ್ಲೇ ಟಿಕೆಟ್ ಪಡೆದು ದರ್ಶನಕ್ಕೆ ಹೋಗುವುದು ಸಾಮಾನ್ಯವೇನೂ ಅಲ್ಲ. ಅವಳ ಇಬ್ಬರೂ ಅಜ್ಜಿಯಂದಿರು ರಾತ್ರಿ ೧0ಕ್ಕೆ ಹಿಂದಿನ ದಿನ ದಿನವಿಡೀ ಪ್ರಯಾಣಿಸಿ ಬಂದಿದ್ದರು. ದೇಹ ಮನಸ್ಸು ಎಲ್ಲವೂ ದಣಿದಿತ್ತು. ಆದರೂ ಮಾರನೆಯ ದಿನ ತಾವು ದರ್ಶನಕ್ಕೆ ಹೋಗಲೇಬೇಕೆಂದು ಹಠಹಿಡಿದರು. ಮಾರನೆಯ ದಿನ ಬೆಳಗ್ಗಿನ ಜಾವ 3 ಗಂಟೆಗೆ ಅವರನ್ನು ಕರೆದುಕೊಂಡು ಹೊರಟು ಸರದಿಯಲ್ಲಿ 3 ಗಂಟೆ ನಿಂತರೆ ಸರತಿ ನಿಧಾನಕ್ಕೆ ಸರಿದು ಸುಮಾರು ಆರು ಗಂಟೆಯ ಹೊತ್ತಿಗೆ ಇನ್ನೇನು ಐನೂರೂ ಚಿಲ್ಲರೆ ಟಿಕೆಟ್ಟುಗಳಿವೆ ಎಂದಾಗ ಇವರಿಗೆ ಸಿಕ್ಕಿತ್ತು. ಸುಮನ ಹಿಂದಿನ ತಿಂಗಳು ದರ್ಶನಕ್ಕೆ ಹೋಗಿದ್ದಳೆಂದು ಅವಳಿಗೆ ದರ್ಶನಕ್ಕೆ ನಿರಾಕರಿಸಿದ್ದರು. ದರ್ಶನಕ್ಕೆ ಸಮಯ ಮಧ್ಯಾಹ್ನವಾಗಿದ್ದರಿಂದ ಅಲ್ಲೇ ತಿರುಪತಿಯಲ್ಲಿ ಒಂದು ರೂಮು ಮಾಡಿಕೊಂಡು ವಿಶ್ರಮಯಿಸುವುದೆಂದು, ವಿಶ್ರಮಿಸಿದ ನಂತರ ದರ್ಶನಕ್ಕೆ ಹೊರಡುವುದು ಎಂದು ನಿರ್ಧರಿಸಿದ್ದರು. 80ರ ಹತ್ತಿರದ ಅಜ್ಜಿಯು ಸದಾ ಏನೋ ಒಂದನ್ನು ಹೇಳುತ್ತಲೇ ಇರೋ ಅವಳ ಅಮ್ಮನೂ ಮಧ್ಯಾಹ್ನದ ವೇಳೆಯಲ್ಲಿ ದರ್ಶನಕ್ಕೆ ಒಳಹೋದವರು ಇನ್ನೂ ಬಂದಿರಲಿಲ್ಲ. ಅವರನ್ನು ಒಳಗೆ ಕಳುಹಿಸಿ ಸುಮನ ಹೊರಗೆ ಕಾಯುತ್ತಿದ್ದಳು. ಒಳಗೆ ಮೊಬೈಲ್ ವಯ್ಯುವಂತಿರಲಿಲ್ಲ. ಹಾಗಾಗಿ ಹೊರಗೆ ಬಂದರೆ ಸುಲಭಕ್ಕೆ ಸಿಕ್ಕುವಂತಿರಲಿ ಎಂದು ಇಲ್ಲೇ ಹತ್ತಿರ ಹೊರ ದ್ವಾರದ ಬಂದು ಕುಳಿತಳು.
——————————————-
——————————————-
ಮುತ್ಯಾಲು ಇದೇ ಮೊದಲ ಬಾರಿಗೆ ಸುಮನಳ ಮನೆಗೆ ಬಂದದ್ದು. ಸುಮನ ಏನೂ ಮುತ್ಯಾಲುಗೆ ಹೊಸಬಳೇನೂ ಅಲ್ಲ. ಅವಳನ್ನು ಆಡಿಸಿದವನು, ಛೇಡಿಸಿದವನು ಅವನೆ. ತಿರುಪತಿಯ ಮನೆಗೆ ಮೊದಲ ಬಾರಿಗೆ ಬಂದಿದ್ದ ಅಷ್ಟೇ. ಈ ಬಗೆಯ ಮನೆಯನ್ನ ಮೊದಲ ಬಾರಿ ಕಾಣುತ್ತಿದ್ದ. ಊರಲ್ಲಿ ಬಲಿಗರ ಮನೆಯನ್ನೂ ಸೇರಿ ಹಲವರ ಸ್ಥಿತಿವಂತರ ಮನೆ ಎಂದರೇನೇ ದೊಡ್ಡ ದೊಡ್ಡ ಸೋಫಾಗಳು, ಅದೂ ಪ್ಲಾಸ್ಟಿಕ್ ಮಯ. ಅದರ ಮೇಲೊಂದಿಷ್ಟು ಹೊದಿಕೆೆಯೆಂಬಂತೆ ಸ್ಪಂಜು ಹೊದಿಕೆ. ಇನ್ನು ನೋಡಿದ ಜಾಗದಲ್ಲೆಲ್ಲಾ ಪ್ಲಾಸ್ಟಿಕ್ ಮಯ. ಗೋಡೆಗಳಲ್ಲೆಲ್ಲಾ ಯಾರೋ ತೆಗೆದ ಪ್ಲಾಸ್ಟಿಕ್ ಕಟ್ಟು ಹಾಕಿದ ಚಿತ್ರ. ಕಪಾಟಿನ ತುಂಬೆಲ್ಲ ಬರೀ ಪ್ಲಾಸ್ಟಿಕ್ ಕಾಣಿಕೆಗಳು. ಉಡುಗೊರೆಗಳು ತುಂಬಿ ಹೋಗಿರುತ್ತವೆ. ಇಷ್ಟೊಂದು ಪ್ಲಾಸ್ಟಿಕ್ ಮಧ್ಯೆ ಮನುಷ್ಯರನ್ನು ಹುಡುಕಲೇ ಬೇಕಾಗುತ್ತದೆ. ಇನ್ನು ದೇವರಂತೂ ಹೇಳುವುದೇ ಬೇಡ. ಪ್ರಪಂಚದಲ್ಲೇ ಇರುವ ದೇವರುಗಳೆಲ್ಲ ಈಗ ಎಲ್ಲರ ಮನೆಗಳಲ್ಲೂ ಇದ್ದುಬಿಟ್ಟಿದ್ದಾನೆ. ಗೋಡೆಯ ತುಂಬೆಲ್ಲಾ ಇರೋಬರೋ ದೇವರುಗಳದೆ ಫೋಟೋಗಳು. ಸಣ್ಣ ಸಣ್ಣ ಜಾಗದಲ್ಲೂ ಹೋದ ಕಡೆಯಿಂದೆಲ್ಲಾ ತಂದ ಪುಟ್ಟ ಫೋಟೋ ಆದರೂ ಸರಿ. ಹೋಗಿದ್ದೆವೆಂದು ತಿಳಿಸಲಿಕ್ಕೋ, ಆ ತಿಳುವಳಿಕೆಯಿಂದ ಮೂಡೋ ಮಾತುಕತೆಗೋ, ಒಟ್ಟಿನಲ್ಲಿ ಯಾವ ಸಣ್ಣ ಜಾಗವನ್ನೂ ಬಿಡದಂತೆ ಪ್ಲಾಸ್ಟಿಕ್ಕಿನಲ್ಲಿ ದೇವರು ಸರ್ವಾಂತರ್ಯಾಮಿಯಾಗಿ ಬಿಟ್ಟಿರುತ್ತಾನೆ. ಹಾಗಾಗಿ ಸುಮನಳ ಮನೆಯಲ್ಲಿ ಹೀಗೆ ಯಾವುದೇ ದೇವರ ಫೋಟೋಗಳನ್ನಾಗಲಿ, ಪ್ರವಾಸಕ್ಕೆ ಹೋದಾಗ ತಂದ ದೇವರ ಪ್ಲಾಸ್ಟಿಕ್ ಮೂರ್ತಿಗಳಾಗಲಿ ಕಾಣಲಿಲ್ಲ.
ತಿರುಪತಿಗೆ ಬಂದದ್ದೇ ಒಂದೆರಡು ದಿನಗಳ ನಂತರ ದರ್ಶನಕ್ಕೆ ಹೋಗುವುದೆಂದು, ಶ್ರೀವಾರುಮೆಟ್ಟ್ಲು ಹತ್ತಿ ಹೋದರೆ ಟಿಕೆಟ್ ದೊರೆಯುವುದೆಂದೂ, ವಾರಾಂತ್ಯವನ್ನು ತಪ್ಪಿಸಿದರೆ ಸುಲಭಕ್ಕೆ ಟಿಕೆಟ್ ದರುಕುವುದರಿಂದ, ಒಂದೆರಡು ದಿನ ಇದ್ದು ಇಲ್ಲೇ ಸುತ್ತಲಿನ ಶ್ರೀಕಾಳಹಸ್ತಿ ಅಪ್ಪಯಲಗುಂಟ ಎಲ್ಲವನ್ನೂ ನೋಡಿ ಹೋಗುವುದೆಂದು, ತಾನೇ ಕಾರು ಮಾಡಿಸಿ ಕಳಸುತ್ತೇನೆಂದು ಸುಮನ ಹೇಳಿ ಮುತ್ಯಾಲುವನ್ನು ಇರಿಸಿಕೊಂಡಿದ್ದಳು.
ಅವರ ಮನೆ ತಿರುಪತಿಯಿಂದ ಸ್ವಲ್ಪ ದೂರವಿದ್ದು, ಒಂದು ಪುಟ್ಟ ಹಳ್ಳಿ. ಸುತ್ತ ಪುಟ್ಟಪುಟ್ಟ ಬೆಟ್ಟಗಳು. ಬೆಟ್ಟ ಅನ್ನುವುದಕ್ಕಿಂತ ಅವನ್ನು ಗುಡ್ಡ ಅನ್ನಬಹುದು. ಇಲ್ಲಿನ ನೆಲದಲ್ಲಿ ದೊಡ್ಡ ಮರಗಳು ಬೆಳೆಯಲಾರವು. ಭೂಮಿಯಮೇಲೆ ಸ್ವಲ್ಪ ಮಣ್ಣಿನ ನಂತರ, ಐದಾರು ಅಡಿ ಆಳದಲ್ಲಿ ಬರೀ ಕಲ್ಲುಗಳು. ಹಾಗಾಗಿ ಬೇರು ಹಬ್ಬಲಿಕ್ಕೆ ಅವಕಾಶ ಕಡಿಮೆ. ಪುಟ್ಟ ಪುಟ್ಟ ಕುರುಚಲುಕಾಡು. ಗಿಡ್ಡ ಮರಗಳನ್ನು ನೋಡೋಕೆ ಚಂದ. ಬೆಳಗಲ್ಲೋ ಸಂಜೆಯಲ್ಲೋ ಆ ಗಿಡಗಳ ನಡುವೆ ನಡೆದು ಬರುವುದು ಸುಮನಳ ವಾಡಿಕೆ. ಹಾಗೆ ಹೊರಟ ಸುಮನಳ ಜೊತೆ ಮುತ್ಯಾಲು ಹೊರಟ. ಈ ಸಮಯದಲ್ಲಿ ಬಲಿ ವಿಷಯವನ್ನು ಹೇಳಬಹುದು, ಹೇಳಿ ಒಪ್ಪಿಸಬಹುದು ಅಂತ ಅಂದುಕೊಂಡಿದ್ದ. ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಸುಮನ ಏನುೂ ಮಾತನಾಡದೆ ಸುಮ್ಮನೆ ಆ ಗಿಡೆಗಳ ಮಧ್ಯ ನಡೆಯುತ್ತಿದ್ದಳು. ಯಾವ ಧಾವಂತವೂ ಇಲ್ಲದೆ, ಇಷ್ಟು ಹೊತ್ತು ಇಷ್ಟು ದೂರ ಕ್ರಮಿಸಬೇಕು ಎನ್ನುವ ಯಾವ ಪೂರ್ವ ಷರತ್ತು ಆಲೋಚನೆಯೂ ಇಲ್ಲದೆ, ಆ ಕುರುಚಲು ಗಿಡುಗಳ ನಡುವಿನ ಸಣ್ಣ ದಾರಿಯಲ್ಲಿ ಚಪ್ಪಲಿ ತೆಗೆದು ಬರೀಗಾಲಲ್ಲಿ ಜಾಗರೂಕವಾಗಿ ಕಾಲಿಗೆ ತಗುಲುತ್ತಿದ್ದ ಕಲ್ಲುಗಳನ್ನು ಅದು ತನಗೆ ಸ್ಪರ್ಶಿಸುತ್ತಿದೆಯೋ ಎಂಬಂತೆ ಪುಟ್ಟಪುಟ್ಟ ಕಲ್ಲುಗಳು ತಾಕಿ ನಡೆವಾಗ ಮೀನಿರುವ ನೀರಲ್ಲಿ ಕಾಲಿಟ್ಟಾಗ ಅವೆಲ್ಲವೂ ಒಟ್ಟಾಗಿ ಕಾಲ ಬಳಿ ಬಂದಾಗ ಆಗುವ ಪುಳಕದಂತೆ ಆ ಸಣ್ಣ ಸಣ್ಣ ಕಲ್ಲುಗಳನ್ನು ಅನುಭವಿಸುತ್ತಾ ನಡೆಯುತ್ತಿದ್ದಳು. ಇಲ್ಲಿ ಮರಗಳು ಎತ್ತರಿಕ್ಕೆ ಬೆಳೆಯಲಿಕ್ಕೆ ಆಗದಿದ್ದರೂ ಒಮ್ಮೊಮ್ಮೆ ವಿಶಾಲವಾಗಿ ಹಬ್ಬಿರುತ್ತಿತ್ತು. ಬೇವು ಇಲ್ಲಿನ ಸ್ವಾಭಾವಿಕ ಬೆಳೆ. ಹಲವಾರು ಬೇವಿನಮರಗಳು ಕಾಣುತ್ತವೆ. ಹಾಗೆ ಕಂಡ ಒಂದು ಬೇವಿನ ಮರವನ್ನು ಅದರ ಎಲೆಗಳನ್ನು ಮುಟ್ಟಿನೋಡುತ್ತಾ, ಆ ಎಲೆಗಳ ನಡುವಲ್ಲಿ ಒಳಹೊಕ್ಕು ನೆಲ ಕಾಣುತ್ತಿರುವ ಬೆಳಕಿಗೆ ಮುಖ ಒಡ್ಡಲಿಕ್ಕೆ ಪ್ರಯತ್ನಿಸುತ್ತಾ, ಆ ಬೆಳಕು ಕಣ್ಣು ತಾಕಿದಂತೆ ಆದರೂ ನೋಡುವುದನ್ನು ವ್ಯವಸ್ಥೆಗೊಳಿಸಿಕೊಳ್ಳುತ್ತಾ ಹಾಗೇ ನಿಂತು ಬಿಟ್ಟಳು. ಕಾಲ ಪೂರ್ತಿ ನಿಂತು ಹೋಗಿತ್ತು ಅವಳಿಗೆ. ಮುತ್ಯಾಲುವಿಗೂ ತಾನು ಜಗುಲಿಯ ಮೇಲೆ ಮಲಗಿದ್ದಾಗ ಅಲ್ಲಿನ ಆ ದೊಡ್ಡ ಮರಗಳ ಎಲೆ ಕೊಂಬೆಗಳ ನಡುವಿಂದ ದಿಡೀರನೆ ಬೆಳಕು ತೂರಿ ಬಂದು ಕಣ್ಣು ಕುಕ್ಕಿ ತನ್ನ ಮಧ್ಯಾನ್ಹದ ನಿದ್ರಾಭಂಗಗೊಳಿಸಿದ್ದ ಹಲವು ದಿನಗಳು ಹಾಗೇ ಬಂದು ಹೋದವು. ಇತ್ತೀಚೆಗೆ ಆ ಜಗುಲಿ ಕಟ್ಟೆ ಟೈಲ್ಸ ಮಯವಾಗಿ ನೆಲ ಕೊರೆಯುವ ಚೆಳಿಯುೂ, ಶುಭ್ರತೆಯ ಹೆಸರಲ್ಲಿ ಅಲ್ಲಿ ಕೂರಲಿಕ್ಕೂ ಜನಕ್ಕೆ ಅವಕಾಶವಿಲ್ಲದೆೇ ಹೋಗಿ, ಮುತ್ಯಾಲುವಿಗೆ ಮಧ್ಯಾಹ್ನದ ನಿದ್ರೆಗೆ ನಾಲ್ಕು ಗೋಡೆಯ ಮನೆಯೇ ಅಭ್ಯಾಸವಾಗಿತ್ತು.
"ಅಮ್ಮಯ್ಯಾ" ಅಂತ ಮುತ್ಯಾಲು ಮಾತು ಆರಂಭಿಸಿದ. "ನೋಡವ್ವ, ನಿಂಗೆ ಗೊತ್ತೇ ಇದೆ, ಊರು ಊರಿನೊಟ್ಟಿಗೆ ಬರೋ ಸಂಪ್ರದಾಯ. ದೇವರೂ ಅಂದ್ರೆ ದೇವರ ಜೊತೆಗೇನೇ ಬರೋ ಪೂಜೆ, ಜಾತ್ರೆೆ ಎಲ್ಲ. ಮುಖ್ಯ ವಿಷಯ ಅಂದರೆ, ಈ ಬಾರಿ ಊರಲ್ಲಿ ಜಾತ್ರೆ ಮಾಡಬೇಕು ಅಂತ ಊರೋರು ನಿಶ್ಚಯಿಸಿದ್ದಾರೆ. ಎಲ್ಲಾ ಸೇರಬೇಕು. ಸಂಭ್ರಮ ಆಗಿ ಬಹಳಾನೆ ಕಾಲ ಆಗಿದೆ. ಜಾತ್ರೆ ಊರ ಸಂಪ್ರದಾಯ. ಊರು ಚೆನ್ನಾಗಿರಬೇಕು ಅಲ್ವಾ. ನಾ ಯಾಕೆ ಇಷ್ಟೆಲ್ಲಾ ಹೇಳ್ತಾ ಇದ್ದೀನಿ ಅಂತ ನಿಂಗೆ ಗೊತ್ತೇ ಇರುತ್ತೆ. ಆದರೂ ನಾ ಹೇಳಬೇಕಲ್ವಾ. ವಿಷಯ ಅಂದ್ರೆ ಊರ ಜಾತ್ರೆ ನಡೆಯಬೇಕು ಅಂದ್ರೆ ತೆಂಕಾಳಮ್ಮಂಗೆ ಬಲಿ ಹಾಕಬೇಕು. ದೇವರಿಗೆ ಬಿಟ್ಟಿರೋ ಚೆನ್ನಾಗಿ ಮೇಯಿಸಿರೋ, ಯಾವ ರೋಗ ಗಾಯ ಏನೂ ಇಲ್ಲದಿರೋ, ಬಲಿಷ್ಠ ಕೋಣಾನ ಬಲಿ ಕೊಡಬೇಕು. ಊರು ಅಂದ್ರೇನೆ ಅಲ್ಲಿನ ಸಂಪ್ರದಾಯ, ಅಲ್ಲಿನ ಜನ, ಅವುಗಳ ಸಂಭ್ರಮ, ಅಲ್ವಾ. ಹಾಗಾಗಿ ಬಲಿ ಹಾಕಬೇಕು ಅಂದರೆ ಕತ್ತೀನ ಬಲಿಗರೇ ಹಿಡಿಯಬೇಕು. ಅವರೇ ಕೋಣಾನ ಕಡೀಬೇಕು. ಕೋಣದ ತಲೆಯನ್ನ ತಂದು ತೆಂಕಾಳಿಯ ಕಾಲಡಿ ಅವರೇ ಇಡಬೇಕು. ತಪ್ಪು ತಿಳಬೇಡ ಹೀಗೆ ಹೇಳ್ತಿದ್ದೀನಿ ಅಂತ. ಈಗ ಬಲಿಗರ ಮನೆಯಲ್ಲಿ ಉಳಿದಿರೋಳು, ಆ ಮನೆತನದ ವಾರಸುದಾರಳು ಅಂದರೆ ನೀನೇನೆ. ಬೇರೆ ಯಾರೂ ಇಲ್ಲ. ಹಾಗಾಗಿ ನೀನೆ ಬಂದು ಈ ಸಂಪ್ರದಾಯ ನಡೆಸಿದ್ರೆ ಜಾತ್ರೆನೂ ನಡೆಯುತ್ತೆ, ಊರೂ ಚೆನ್ನಾಗಿರುತ್ತೆ. " ಅಂತ ಮುತ್ಯಾಲು ಹೇಳುತ್ತಿರಬೇಕಾದರೇನೆ, ಆ ಮಾತನ್ನ ತಡೆದ ಸುಮನ, “ಆ!!! ಕಾಡುಮೊಲ ಚೆಂಗಂತ ಹಾರಿತು. ಇಷ್ಟೊತ್ತು ಅದೇಗೋ ಅದು ನನ್ನನ್ನೇ ನೋಡುತ್ತಾಯಿತ್ತು. ಈಗ ತಲೆ ತಿರುಗಿಸಿದರೆ ಚೆಂಗಂತ ಹಾರಿಬಿಟ್ಟಿದೆ. ಈ ಸುತ್ತ ಮುತ್ತ ಅದೆಷ್ಟೋ ಬಾರಿ ಕಾಣುತ್ತಿತ್ತು. ಆದರೆ, ಹಾರಿ ಹೋಗೋದು. ಅಪರೂಪಕ್ಕೆ ಇವತ್ತೆ ನೋಡು ಇಷ್ಟೊತ್ತು ನೋಡಲಿಕ್ಕೆ ಅಂತ ಆದದ್ದು. ಗುಂಡುಗುಂಡಾಗಿ" ಅಂತ ಆಗತಾನೆ ಕಂಡು ಕಾಣೆಯಾಗಿ ಹೋದ ಕಾಡುಮೊಲದ ಬಗೆಗಿನ ಸುಮನಳ ಮಾತು ಮುತ್ಯಾಲುವಿನ ಅತ್ಯಂತ ಅವಶ್ಯವಾದ ಘನಮಾತುಗಳ ಮೇಲಿಂದ ತೀರ ಕ್ಷುಲ್ಲಕ ವಿಷಯ ಒಂದು ಬಂದು ಅವನ ಮಾತಿನ ಓಘಕ್ಕೆ ಧಕ್ಕೆ ತಂದದ್ದಕ್ಕಾಗಿ ಕೈಯಲ್ಲೇನಾದರೂ ಕೋವಿ ಇದ್ದಿದ್ದರೆ ಆ ಮೊಲವನ್ನ ಹೊಡೆದು ಹಾಕಿಬಿಡುತ್ತಿದ್ದೆನೆಂದೇ ಅಂದುಕೊಂಡ.
ಆದರೂ ಸಾವರಿಸಿಕೊಂಡು "ಅಮ್ಮಯ್ಯ, ಇಲ್ಲಿ ಕೇಳು ಮೊದಲು. ನೋಡವ್ವ, ನಿಂಗೆ ಕಡೀಲಿಕ್ಕೆ ಆಗೋಲ್ಲ ಅಂತಾನೂ ನಂಗುತ್ತು. ಆ ಕೋಣ ನೋಡಿದ್ರೇನೆ ಹೆದರಿ ಓಡಿ ಹೋಗುವಂತವಳು ನೀನು. ಇಲ್ಲ ಆ ಕೋಣ ನೋಡಿ ಆಹಾ ಅದೆಷ್ಟು ಮುದ್ದಾಗಿದೆ, ಅದೆಷ್ಟು ಕಪ್ಪಾಗಿದೆ ಅಂತ ಸವರುತ್ತಾ ಕೂರವವಳು. ಹಾಗಿದ್ರೆ ಅದೇಗೆ ಕಡಿತೀಯ ಹೇಳು. ಅದೂ ಜಾತ್ರೆಯಲ್ಲಿ. ಊರಜನ, ಅವರ ನೆಂಟರು ಇಷ್ಟರು, ನಾಲ್ಕೂರಿನ ಮಂದಿ, ನೀರು ಬಂಡಿಗಳು, ದೀಪ ಬೆಳಗಲ್ಲಿಕ್ಕೆ ಸಾಲು ಸಾಲಲ್ಲಿ ನಿಂತಿರೋ ಜನ, ತಮಟೆ ಶಬ್ದ ಹೀಗೆ ಎಲ್ಲಿ ನೋಡಿದರೆ ಸದ್ದು ಗಲಾಟೆ, ದೂಳು ತುಂಬಿರೋ ಕಡೆಯಲ್ಲಿ ನಿಂಗೆ ನಿಲ್ಲೋಕೂ ಕಷ್ಟ ಆಗಬಹುದು. ನಮಗೆಲ್ಲಾ ಅರ್ಥ ಆಗುತ್ತೆ ತಾಯಿ. ಅದಕ್ಕೇ ಐನೋರು ಯಾವುದೋ ದೊಡ್ಡ ಐನೋರನ್ನು ಕಂಡು ಈ ವಿಚಾರ ತಿಳಿಸಿ ಅದಕ್ಕೆ ಬೇಕಿರೋ ಪರಿಹಾರಾನೂ ತಂದಾಯಿತು. ನೀ ಅದರ ತಲೆ ಕಡಿಬೇಕಿಲ್ಲ ನೋಡು. ಬಲಿ ಕೊಡಲಿಕ್ಕೆ ಅಂತ ಇರೋ ಕತ್ತಿ ತಗೊಂಡು ಪೂಜೆ ಮಾಡಿ ನಿಂಗೆ ಕೊಡ್ತಾರೆ. ನಿನ್ನ ಕೈಯಿಂದ ಶಾಸ್ತ್ರಕ್ಕೆ ಅಂತ ಆ ಕತ್ತಿನ ಕೋಣದ ಕುತ್ತಿಗೆ ಮೇಲೆ ತಂದಿಡು ಅಷ್ಟೇ. ಅದರ ಚೂಪಿಗೆ ಭಾರಕ್ಕೆ ಒಂದೆರಡು ಹನಿ ರಕ್ತ ಭೂಮಿ ಮೇಲೆ ಬಿದ್ದು ಮಣ್ಣು ತಣೀಬೇಕು. ಹಾಗೆ ರಕ್ತ ಬಿದ್ದದ್ದೆ, ನಿನ್ನ ಪಕ್ಕ ಯಂಕಟ ಇರ್ತಾನೆ. ತೋಟದಲ್ಲಿ ಮನೆ ಮಾಡಿಕೊಂಡು ಇದ್ದನಲ್ಲ, ನಿಮ್ಮ ಜಮೀನಿನ ಹತ್ತಿರದ್ದೆ ಅವರ ಜಮೀನು," ಅರ್ಥವಾದಂತೆ ಸುಮನ ತಲೆಯಾಡಿಸಿದಳು "ಅವನು ಆ ಕತ್ತಿ ಹಿಡಿದು ಎತ್ತಿ ಕೋಣ ಕಡಿತಾನೆ. ನೀ ಮಾಡಬೇಕಾಗಿರುವುದೆಲ್ಲ ಇಷ್ಟೆ. ನಮ್ಮ ಜೊತೆ ಬಂದು ನಿಂತು ಕತ್ತಿ ಶಾಸ್ತ್ರಕ್ಕೆ ಎತ್ತು. ಅಲ್ಲಿ ಬೀಳೋ ನಾಲ್ಕು ಹನಿ ರಕ್ತ ಈ ಜಾತ್ರೇನ ನಡೆಸುತ್ತೆ. ಏನೂ ಅಂದುಕೊಳ್ಳದೆ ಈ ಒಂದು ಕೆಲಸ ಮಾಡಿಕೊಡವ್ವ. ಊರು ದೊಡ್ಡದು. ಊರ ಜನ, ಅದರ ಸಂಪ್ರದಾಯ ಎಲ್ಲಾ ದೊಡ್ಡದು. ಹಾಗಾಗಿ ಈ ಒಂದು ಕೆಲಸ ಮಾಡಿಕೊಡವ್ವ" ಮುತ್ಯಾಲು ಹೇಳುವುದೆಲ್ಲವನ್ನೂ ಕೇಳುತ್ತಲೆ ತಲೆಯಾಡಿಸಿದ ಸುಮನಳ ಹಾವಭಾವಕ್ಕೆ ಅವಳು ಸರಿಯೆಂದದ್ದೊ, ಇಲ್ಲ ಎಂದದ್ದೊ, ಒಪ್ಪಿದ್ದ ಬಿಟ್ಟಿದ್ದ ಯಾವುದೂ ಮುತ್ಯಾಲುವಿಗೆ ಅರ್ಥವಾಗಲಿಲ್ಲ. ಮತ್ತೆ ಅವಳೆಡೆಗೆ ಏನೂ ತಿಳಿಯದ ಪ್ರಶ್ನಾರ್ಥಕ ಚಿಹ್ನೆಯಂತಹ ಮುಖ ಮಾಡಿಕೊಂಡಿದ್ದ ಮುತ್ಯಾಲುವನ್ನು ಕಂಡದ್ದೆ ಸಮ್ಮತಿಸುವ ಹೂ ಎನ್ನುವ ಭಂಗಿಯನ್ನು ಸ್ಪಷ್ಟಗೊಳಿಸಿ ತನ್ನ ಪಾಡಿಗೆ ಅಲ್ಲಿನ ಬೇವಿನ ಮರದ ಬುಡವನ್ನು ನೇವರಿಸುತ್ತ ಅಲ್ಲೇ ಇದ್ದ ಕಲ್ಲಿನ ಬಳಿ ಕೂತಳು. ದಪ್ಪದಪ್ಪ ಗೊದ್ದಗಳ ಸಾಲು ಯಾವುದೋ ಅಗಮ್ಯ ಉದ್ದೇಶಕ್ಕೆ ಶಿಸ್ತುಬದ್ಧವಾಗಿದೆೆಯೆಂಬಂತೆ ಸಾಗುತ್ತಿದ್ದ ಅವುಗಳ ಚಲನೆಯನ್ನು ದಿಟ್ಟಿಸುತ್ತಾ ಬೇವಿನ ಬುಡವನ್ನು ನೇವರಿಸುತ್ತಾ , ಆ ಮರದ ಒಟ್ಟು ಎಲೆಗಳ ನಡುವಲ್ಲಿ ಇಣುಕುತ್ತಿದ್ದ ಸೂರ್ಯನನ್ನು ನೋಡುತ್ತ, ಅದರ ಕಿರಣಗಳಿಗೆ ಮುಖವೊಡ್ಡಿ “ಮುತ್ಯಾಲು ತೆಂಕಾಳಮ್ಮಂಗೆ ಜಾತ್ರೆಗೆ ಬೇವಿನ ಸೊಪ್ಪಲ್ಲೂ ಅಲಂಕಾರ ಮಾಡ್ತಾರೆ ಅಲ್ವಾ, ಹಾಗೆ ಆ ದಿನ ಬೇವಿನ ಎಲೆ ಅವಳ ನೈವೇದ್ಯ ತಾನೆ? ನಾನು ಇದೇ ಬೇವಿನ ಮರದ ಸೊಪ್ಪನ್ನು ತರ್ತೀನಿ" ಈಗ ಅವಳು ತರ್ತೀನಿ ಅಂದದ್ದು ಸ್ಪಷ್ಟವಾಗಿ ಕೇಳಿದ್ದರಿಂದ ಸುಮನ ಜಾತ್ರೆಗೆ ಬರುವುದು ಎಂಬುದು ನಿಶ್ಚಯವಾಯಿತು. ಅವಳು ಜಾತ್ರೆಗೆ ಬಂದರೆ ಸಾಕು ಉಳಿದದ್ದನ್ನು ಅದೇಗೋ ನೆರವೇರಿಸಿದರೂನೂ ಆಗುತ್ತೆ ಎಂದುಕೊಂಡು ಮುತ್ಯಾಲು ತಾನು ಬಂದ ಕೆಲಸ ಯಶಸ್ವಿಯಾಯಿತೆಂದು ಖುಷಿಪಟ್ಟ. " ಮುತ್ಯಾಲು ಈ ಮರಕ್ಕೆ ನಾನು ಹೆಸರಿಟ್ಟಿದ್ದೀನಿ. ಇದರ ಹೆಸರು ಚಮಕಿಣಿ, ಗಾಳಿ ಬೀಸುವುವಾಗ, ಆ ಎಲೆಗಳ ನಡುವಿಂದ ಬರೋ ಬೆಳಕು ಹಾಗೆ ಹೀಗೆ ಅಲಾಡ್ತಿರುತ್ತೆ. ಅಲ್ಲಿ ನೋಡು. ಅದೇಗೆ ಚಮಕ್ ಚಮಕ್ ಅಂತ ಮಿಂಚಿನಂತೆ ಬೆಳಗುತ್ತಿದೆ. ಅದಕ್ಕೆ ಇದಕ್ಕೆ ಚಮಕಿಣಿ ಅಂತ ಹೆಸರಿಟ್ಟಿದ್ದೀನಿ. ಚಮಕಿ ಅಂತಾನೂ ಕರೀತೀನಿ. ಪ್ರೀತಿಯಿಂದ ಅದನ್ನು ಹಾಗೆ ಚಮಕಿ ಚಮಕಿ ಅಂತ ಕರೆದರೆ ಅದು ಉತ್ತರಾನೂ ಕೊಡುತ್ತೆ, ಗೊತ್ತ" ಅಂತ ಏನೋ ಹೇಳ್ತ ಇದ್ದರೂನು ಈ ಯಾವುದೂ ಅರ್ಥವಾಗದ ಮುತ್ಯಾಲು ತನ್ನ ಕೆಲಸ ನೆರವೇರಿದ ವಿಷಯ ಹಾಗೂ ಅದರೊಟ್ಟಿಗೆ ಹಲವಾರು ಜರುಗಬೇಕಿದ್ದ ಸಂಗತಿಗಳೆಲ್ಲ ತಲೆಯಲ್ಲಿ ಹೊಕ್ಕು ಮುತ್ಯಾಲು ಮನೆಗೆ ಹೋಗುವ ಎಂದಾಗ ಮನೆಗೆ ನಡೆದರು.
—————————————————-
—————————————————-
ಮೊದಲಿಗೆ ಪೂಜೆ ಹೊರಗಿರುವ ಬೇವಿನ ತೋಪಿನಲ್ಲಿರೋ ತೆಂಕಾಳಮ್ಮನ ಗುಡಿಯಲ್ಲಿ ನಡೆಯಬೇಕು. ಅಲ್ಲಿರೋದು ಬರಿ ಒಂದು ಕಲ್ಲುಗುಂಡು. ಅದಕ್ಕೆ ಮೊದಲು ಪೂಜೆ ಆಗಬೇಕು. ಅಲ್ಲಿಂದ ನೀರು ಬಂಡಿಗಳ ಸಮೇತ ದೀಪ ಹೊತ್ತು ಹೆಣ್ಣುಮಕ್ಕಳೆಲ್ಲ ಮೊದಲು ದೀಪ ಬೆಳಗಿ, ಅಲ್ಲಿಂದ ನಡೆದುಕೊಂಡು ಆ ದೀಪ ಹೊತ್ತುಕೊಂಡು ಬಂದು ಇಲ್ಲಿರೋ ತೆಂಕಾಳಮ್ಮಂಗೆ ಬೆಳೆಗಬೇಕು. ಅದು ಪದ್ಧತಿ. ಎಲ್ಲಾ ಊರುಗಳಿಂದ ನೆಂಟರೆಲ್ಲರೂ ಬಂದಿದ್ದಾರೆ. ಎಲ್ಲಿ ನೋಡಿದರೂ ಹೊಸ ಬಟ್ಟೆ, ಬಣ್ಣ ಬಣ್ಣದ ಬಟ್ಟೆಯ ತೊಟ್ಟ ಹೆಂಗಳೆಯರು. ಅವರ ದೀಪಕ್ಕೆ ಮಾಡಿದ ಅಲಂಕಾರ ಹಾಗೂ